ವಿಜಯಪುರ : ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಇರುವ ರಾಣಿ ಚೆನ್ನಮ್ಮ ನಾಟ್ಯ ಮಂದಿರ ಭೂಮಿ ಪೂಜೆ ನೆರವೇರಿಸಿ ನೂತನ ರಂಗಮಂದಿರ ನಿರ್ಮಿಸುವಂತೆ ಒತ್ತಾಯಿಸಿ ರಾಣಿ ಚೆನ್ನಮ್ಮ ನಾಟ್ಯ ಮಂದಿರ ಸ್ಥಾಪನಾ ಹೋರಾಟ ಸಮಿತಿಯಿಂದ ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಹಾಗೂ ವೃತ್ತಿ ರಂಗ ಭೂಮಿ ಹಿರಿಯ ಕಲಾವಿದರಾದ ಎಲ್. ಬಿ. ಶೇಖ ಮಾಸ್ತರ ಅವರು ಮಾತನಾಡಿ, ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಇರುವ ರಾಣಿ ಚೆನ್ನಮ್ಮ ನಾಟ್ಯ ಮಂದಿರವನ್ನು ಕಳೆದ 10 ವರ್ಷಗಳ ಹಿಂದೆ ಜೀರ್ಣೋದ್ದಾರ ಮಾಡಿ ನೂತನ ರಂಗಮಂದಿರ ನಿರ್ಮಿಸುವಗೋಸ್ಕರ ಹಳೆಯ ರಂಗ ಮಂದಿರವನ್ನು ಮಹಾನಗರ ಪಾಲಿಕೆಯ ಅಧಿಕಾರಿಗಳು ತೆರವುಗೊಳಿಸಿರುತ್ತಾರೆ. ಅಲ್ಲಿಂದ ಇಲ್ಲಿಯವರೆಗೆ ಕಟ್ಟಡ ಕಾಮಗಾರಿ ಪ್ರಾರಂಭ ಮಾಡದೇ ಇರುವುದು ಕಲೆಯನ್ನು ನಂಬಿ ಜೀವನ ಸಾಗಿಸುತ್ತಿದ್ದ ಬಡ ವೃತ್ತಿರಂಗಭೂಮಿ ಕಲಾವಿದರ ಬದುಕು ಬೀದಿಗೆ ಬಂದಿದೆ. ಇದು ಖಂಡನೀಯ ವಿಷಯವಾಗಿದೆ. ಜನವರಿ 9 -2025 ರಂದು ಕೇಂದ್ರ ಬಸ್ ನಿಲ್ದಾಣದ ಮುಂದೆ ರಾಣಿ ಚೆನ್ನಮ್ಮವರ ವೃತ್ತ ಉದ್ಘಾಟನೆ, ಬಸ್ ನಿಲ್ದಾಣಕ್ಕೆ ನಾಮಕರಣ ಹಾಗೂ ವಿವಿಧ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮಕ್ಕೆ ತಾವು ಆಗಮಿಸುತ್ತಿದ್ದು ಸ್ವಾಗತಾರ್ಹವಾದುದು. ಜ.9ರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ನಾಟ್ಯ ಮಂದಿರದ ಭೂಮಿ ಪೂಜೆ ಕಾರ್ಯಕ್ರಮವನ್ನು ನಡೆಸುವ ಮೂಲಕ ಕಲಾವಿದರ ಬಹುದಿನದ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಣಿ ಚೆನ್ನಮ್ಮ ನಾಟ್ಯ ಮಂದಿರ ಸ್ಥಾಪನಾ ಹೋರಾಟ ಸಮಿತಿ ಹೋರಾಟಗಾರ ಹಾಗೂ ಸಾಹಿತಿ ಲಾಯಪ್ಪ ಇಂಗಳೆ ಮಾತನಾಡಿ, ಸ್ವಾತಂತ್ರ್ಯ ಚಳುವಳಿಗೆ ಪ್ರೇರಣಾ ಶಕ್ತಿಯಾಗಿ, ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಹುಟ್ಟು ಹಾಕಿದ ಶತಮಾನ ಕಂಡ ಐತಿಹಾಸಿಕ ರಾಣಿ ಚೆನ್ನಮ್ಮ ನಾಟ್ಯ ಮಂದಿರವನ್ನು ಅಭಿವೃದ್ಧಿಯ ವಿಷಯದಲ್ಲಿ ತೆರವುಗೊಳಿಸಿರುವುದು ನೋವಿನ ಸಂಗತಿ. ಬಡ ಕಲಾವಿದರ ಹಿತ ಕಾಯುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದರು.
ನೂತನ ಕಟ್ಟಡ ಕಾಮಗಾರಿಗೆ 50 ಲಕ್ಷ ರೂಪಾಯಿ ಬಿಡುಗಡೆ ಮಾಡಿಸಿರುವುದಾಗಿ ವಿಜಯಪುರ ನಗರದ ಶಾಸಕರಾದ ಬಸನಗೌಡ ಆರ್ ಪಾಟೀಲ (ಯತ್ನಾಳ) ಅವರು ತಿಳಿಸಿರುವುದು ಸ್ವಾಗತಾರ್ಹ.
ಜೊತೆಗೆ ಈ 50 ಲಕ್ಷ ರೂಪಾಯಿಯಲ್ಲಿ ಸುಸಜ್ಜಿತ ರಂಗ ಮಂದಿರ ನಿರ್ಮಾಣವಾಗುವುದಿಲ್ಲ. ಸುಮಾರು 5 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿ ಸುಸಜ್ಜಿತ ನಾಟ್ಯ ಮಂದಿರ ನಿರ್ಮಾಣಮಾಡುವ ಜವಾಬ್ದಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹಾಗೂ ನಗರ ಶಾಸಕ ಯತ್ನಾಳ ಅವರು ತೆಗೆದುಕೊಂಡು ಕಲಾವಿದರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹೋರಾಟಗಾರರಾದ ವಿನೋದ ಖೇಡ, ಭೋಗೇಶ ಸೋಲಾಪೂರ, ಅನಿಲ ಇಕ್ಕಡೆ, ಮಲ್ಲಿಕಾರ್ಜುನ ಬಟಗಿ, ಲಿಂಗರಾಜ ಬಿದರಕುಂದಿ,ಲಕ್ಷ್ಮಣ ಕಂಬಾಗಿ, ಗಿರೀಶ ಕಲಘಟಗಿ ಯವರು ಮಾತನಾಡಿ, ಸರ್ಕಾರ ಮತ್ತು ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಜವಾಬ್ದಾರಿ ಮರೆತು ಕಲಾವಿದರ ಹಿತಕಾಯದೆ ಕೇವಲ ಪ್ರಚಾರಕೋಷ್ಕರ ನಾಟ್ಯ ಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಹೇಳುವುದನ್ನು ಬಿಟ್ಟು ಕೂಡಲೇ ಮುಖ್ಯಮಂತ್ರಿಗಳಿಂದ ಶಿಲಾನ್ಯಾಸ ಕಾರ್ಯಕ್ರಮ ನಡೆಸಿ ಶತಮಾನದ ನಾಟ್ಯ ಮಂದಿರದ ನೂತನ ಕಟ್ಟಡ ಕಾಮಗಾರಿ ಪ್ರಾರಂಭಿಸಿ ಬಡ ಕಲಾವಿದರನ್ನು ಉಳಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಣಿ ಚೆನ್ನಮ್ಮನವರ ವಂಶಸ್ಥರಾದ ಬಸವರಾಜ ದೇಶಮುಖ, ಜಗದೇವ ಸೂರ್ಯವಂಶಿ, ಪ್ರಕಾಶ ಸಬರದ, ದಯಾನಂದ ಸಾವಳಗಿ, ಕಲ್ಲಪ್ಪ ಶಿವಶರಣ, ಅಂಬಾದಾಸ ಜೋಶಿ, ಅಂಬಣ್ಣ ಗುನ್ನಾಪುರ, ಸಂತೋಷ ಕಲಘಟುಗಿ, ರಾಜು ತಡಲಗಿ, ಎಂ.ಆರ್.ಗುರಿಕಾರ, ಸೋಮಶೇಖರ ಮೆಂಡೆಗಾರ, ರಫೀಕ ಬಾಗವಾನ, ನೂರಅಹಮ್ಮದ ಕಲಾದ, ಮಲ್ಲಿಕಾರ್ಜುನ, ಅಯೂಬ ಇಕ್ಕಡಿ, ಸಂಗಮೇಶ ಸಗರ, ಮಾದೇವ ಬನಸೋಡೆ, ರಾಮನಗೌಡ ಪಾಟೀಲ ಇದ್ದರು.

