Thursday, August 21, 2025
Homeರಾಜಕೀಯಸಾರಿಗೆ ಸಚಿವರಿಂದ ದಾವಣಗೆರೆ ಅತ್ಯಾಧುನಿಕ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣ ಕಾಮಗಾರಿ ಪರಿಶೀಲನೆ

ಸಾರಿಗೆ ಸಚಿವರಿಂದ ದಾವಣಗೆರೆ ಅತ್ಯಾಧುನಿಕ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣ ಕಾಮಗಾರಿ ಪರಿಶೀಲನೆ

ದಾವಣಗೆರೆ ಆ. 23: ದಾವಣಗೆರೆಯಲ್ಲಿ 120 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕವಾದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದ್ದು ಡಿಸೆಂಬರ್ ಅಂತ್ಯದ ವೇಳೆ ಇದರ ಉದ್ಘಾಟನೆ ನೆರವೇರಿಸಲು ಉದ್ದೇಶಿಸಲಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿಯವರು ತಿಳಿಸಿದರು.
ಅವರು ಬುಧವಾರ ದಾವಣಗೆರೆ ನಗರದ ಪಿ.ಬಿ.ರಸ್ತೆಯಲ್ಲಿ ನಿರ್ಮಾಣಗುತ್ತಿರುವ ಬಸ್ ನಿಲ್ದಾಣ ಕಾಮಗಾರಿಯನ್ನು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರೊಂದಿಗೆ ಕಾಮಗಾರಿ ವೀಕ್ಷಣೆ ಮಾಡಿ ಮಾತನಾಡಿದರು.
120 ಕೋಟಿ ವೆಚ್ಚದ ಅತ್ಯಾಧುನಿಕ ಸೌಲಭ್ಯವುಳ್ಳ ಬಸ್ ನಿಲ್ದಾಣ ಇದಾಗಿದ್ದು ಆರೂವರೆ ಎಕರೆ ಜಾಗದಲ್ಲಿ ನಿರ್ಮಾಣವಾಗುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಶೇ 75 ರಷ್ಟು ಅನುದಾನ ಮತ್ತು ಕೆ.ಎಸ್.ಆರ್.ಟಿ.ಸಿ.ಯಿಂದ ಶೇ 25 ರಷ್ಟು ಅನುದಾನದಲ್ಲಿ ನಿಲ್ದಾಣ ನಿರ್ಮಾಣವಾಗುತ್ತಿದೆ. 3 ಮಾಲ್‍ಗಳು, ಹೋಟೆಲ್, ಥಿಯೇಟರ್ ಸೇರಿದಂತೆ ಪ್ರಯಾಣಿಕರಿಗೆ ಅಗತ್ಯವಿರುವ ತತ್‍ಕ್ಷಣದ ಸೌಲಭ್ಯಗಳು ಇಲ್ಲಿ ಕಲ್ಪಿಸಲಾಗುತ್ತದೆ. ಏಕಕಾಲದಲ್ಲಿ 41 ಬಸ್‍ಗಳು ಹೋಗಲು ಸ್ಥಳಾವಕಾಶ ಕಲ್ಪಿಸಲಾಗಿದೆ. ಜೊತೆಗೆ ಕಾರ್ ಪಾರ್ಕಿಂಗ್ ವ್ಯವಸ್ಥೆಯು ಇಲ್ಲಿರಲಿದೆ ಎಂದರು.

ಕೆ.ಎಸ್.ಆರ್.ಟಿ.ಸಿ.ಗೆ 5000 ಬಸ್ ಖರೀದಿ; ಈ ಹಿಂದೆ 4000 ಬಸ್‍ಗಳ ಖರೀದಿಗೆ ಟೆಂಡರ್ ಆಗಿದ್ದು ಇದರೊಂದಿಗೆ ಈಗ 1000 ಬಸ್‍ಗಳನ್ನು ಖರೀದಿ ಸೇರಿ ಒಟ್ಟು 5 ಸಾವಿರ ಬಸ್‍ಗಳನ್ನು ಖರೀದಿಸಲಾಗುತ್ತಿದೆ. ಇದರಲ್ಲಿ ಎಲೆಕ್ಟ್ರಾನಿಕ್ ಬಸ್‍ಗಳು ಇರಲಿವೆ. ನಗರ, ಗ್ರಾಮೀಣ ಸಾರಿಗೆಗೆ ಎಲೆಕ್ಟ್ರಾನಿಕ್ ಬಸ್‍ಗಳನ್ನು ನೀಡಲು ಉದ್ದೇಶಿಸಲಾಗಿದೆ ಎಂದರು.
16 ಸಾವಿರ ಹುದ್ದೆಗಳು ಖಾಲಿ; 2016 ರಿಂದ ಸುಮಾರು 16 ಸಾವಿರ ಸಿಬ್ಬಂದಿಗಳು ನಿವೃತ್ತರಾಗಿದ್ದು ನೇಮಕಾತಿ ಪ್ರಕ್ರಿಯೆ ನಡೆದಿರುವುದಿಲ್ಲ. ಇದರಿಂದ ಹೆಚ್ಚುವರಿ ಬಸ್‍ಗಳನ್ನು ಓಡಿಸಲು ಸಾಧ್ಯವಾಗುತ್ತಿಲ್ಲ. ಹಂತ
ಹಂತವಾಗಿ ಖಾಲಿ ಇರುವ ನಾಲ್ಕು ನಿಗಮಗಳ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುತ್ತದೆ ಎಂದರು.
1700 ಕೋಟಿ ಕೆ.ಎಸ್.ಆರ್.ಟಿ.ಸಿಗೆ; ಸರ್ಕಾರ ಶಕ್ತಿ ಯೋಜನೆ ಸೇರಿದಂತೆ ಬಸ್‍ಗಳ ಖರೀದಿಗೆ 1700 ಕೋಟಿಯನ್ನು ನೀಡಿದ್ದು ಶಕ್ತಿ ಯೋಜನೆಯ ಎಲ್ಲಾ ಅಂಕಿ ಅಂಶಗಳನ್ನು ನೀಡಿದ ನಂತರ ನಿಗಮಗಳಿಗೆ ಅನುದಾನ ಬಿಡುಗಡೆಯಾಗಲಿದೆ ಎಂದರು.
ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಮಾತನಾಡಿ ನೂತನ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣವು ಎಲ್ಲಾ ನಾಗರೀಕ ಸೌಲಭ್ಯವನ್ನು ಹೊಂದಲಿದ್ದು ಸಾರ್ವಜನಿಕರಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳು ಇಲ್ಲಿರಲಿದೆ. ನಗರದಲ್ಲಿ ಟ್ರಕ್ ಟರ್ಮಿನಲ್ ಅಗತ್ಯವಿದ್ದು ಸ್ಥಳದ ಬಗ್ಗೆ ಸಭೆಯನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸ್ಥಳಾವಕಾಶ ಕಲ್ಪಿಸಿ ಟರ್ಮಿನಲ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಈ ವೇಳೆ ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ, ಕೆ.ಎಸ್.ಆರ್.ಟಿ.ಸಿ.ಎಂ.ಡಿ ಅನ್ಬುಕುಮಾರ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments