Wednesday, August 20, 2025
Homeಬರಹಮೊದಲನೆಯವರು ಪ್ರತ್ಯಕ್ಷ ಅಪರಾಧಿಗಳು. ಎರಡನೆಯವರು ಪರೋಕ್ಷ ಅಪರಾಧಿಗಳು. ಪಾಪ ಕೃತ್ಯಕ್ಕೆ ಪ್ರಜ್ವಲ್ ಒಬ್ಬನೇ ಹೊಣೆಯಲ್ಲ!

ಮೊದಲನೆಯವರು ಪ್ರತ್ಯಕ್ಷ ಅಪರಾಧಿಗಳು. ಎರಡನೆಯವರು ಪರೋಕ್ಷ ಅಪರಾಧಿಗಳು. ಪಾಪ ಕೃತ್ಯಕ್ಕೆ ಪ್ರಜ್ವಲ್ ಒಬ್ಬನೇ ಹೊಣೆಯಲ್ಲ!

ಕೆಲ ಪಾಪ ಕೃತ್ಯಗಳಲ್ಲಿ ಎರಡು ರೀತಿಯ ಅಪರಾಧಿಗಳಿರುತ್ತಾರೆ. ಮೊದಲನೆಯವರು ಪ್ರತ್ಯಕ್ಷ ಅಪರಾಧಿಗಳು. ಎರಡನೆಯವರು ಪರೋಕ್ಷ ಅಪರಾಧಿಗಳು. ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ಪ್ರತ್ಯಕ್ಷ ಅಪರಾಧಿಯಾದರೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಎಚ್.ಡಿ. ರೇವಣ್ಣ, ಎಚ್.ಡಿ. ಕುಮಾರಸ್ವಾಮಿ, ಭವಾನಿ ರೇವಣ್ಣ, ಡಾ. ಸಿಎನ್ ಮಂಜುನಾಥ್ ಮತ್ತಿತರರು ಪರೋಕ್ಷ ಅಪರಾಧಿಗಳು…

ಹಿರಿಯರಾದ ದೇವೇಗೌಡರಾದಿಯಾಗಿ ಅವರ ಕುಟುಂಬದ ಸದಸ್ಯರನ್ನು ಕಟಕಟೆಯಲ್ಲಿ ನಿಲ್ಲಿಸುತ್ತಿರುವುದಕ್ಕೆ ಬಲವಾದ ಸಮರ್ಥನೆ ಇದೆ. ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ. ದೇವರಾಜೇಗೌಡ 2023ರ ಡಿಸೆಂಬರ್ 23ರಂದು ಪ್ರಜ್ವಲ್ ರೇವಣ್ಣ ಅತ್ಯಾಚಾರ, ಲೈಂಗಿಕ ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯಗಳ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ಪತ್ರ ಬರೆದಿದ್ದರು. ರಾಜ್ಯ ಬಿಜೆಪಿ ಮುಖಂಡರು ಹೈಕಮಾಂಡ್ ನಾಯಕರಿಗೂ ಮಾಹಿತಿ ಮುಟ್ಟಿಸಿದ್ದರು. ಹೀಗೆ ದೂರದ ಬಿಜೆಪಿಯ ರಾಷ್ಟ್ರ ನಾಯಕರ ಕಿವಿಗೂ ಬಿದ್ದಿದ್ದ ವಿಷಯ ಬೆಂಗಳೂರಿನ ಪದ್ಮನಾಭನಗರದ ದೇವೇಗೌಡರ ಮನೆಗೆ ಅಥವಾ ಎಚ್.ಡಿ. ಕುಮಾರಸ್ವಾಮಿ ಅವರ ಜೆಪಿ ನಗರದ ಮನೆಗಳನ್ನು ತಲುಪಿರಲಿಲ್ಲ ಎಂದರೆ ನಂಬಬಹುದೇ?

ಇದೇ ಹಿನ್ನೆಲೆಯಲ್ಲಿ 2024ರ ಲೋಕಸಭಾ ಚುನಾವಣೆ ವೇಳೆ ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯನ್ನು ಬದಲಿಸಬೇಕೆಂಬ ಚರ್ಚೆ ನಡೆಯಿತು. ಒಂದೊಮ್ಮೆ ಪ್ರಜ್ವಲ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡದಿದ್ದರೆ ಆತನ ಅತ್ಯಾಚಾರ ಪ್ರಕರಣ ಹೊರಬರುವ ಸಾಧ್ಯತೆಗಳು ಬಹಳ ಕಮ್ಮಿ ಇದ್ದವು. ಆದರೂ ಮನೆಗೆ ಮಾರಕವಾಗುತ್ತಿರುವ ಮಗನಿಗೆ ಟಿಕೆಟ್ ಬೇಡ ಎಂದು ಹೇಳಲು ಎಚ್.ಡಿ. ರೇವಣ್ಣ ಮತ್ತು ಭವಾನಿ ರೇವಣ್ಣ ತಯಾರಿರಲಿಲ್ಲ. ಹಾಸನದಲ್ಲಿ ರೇವಣ್ಣ ಕುಟುಂಬಕ್ಕೆ ಟಿಕೆಟ್ ಕೊಡದಿದ್ದರೆ ಮಂಡ್ಯದಲ್ಲಿ ತಮ್ಮ ಸ್ಪರ್ಧೆಗೆ ಕುಟುಂಬದಲ್ಲೇ ವಿರೋಧ ವ್ಯಕ್ತವಾಗಬಹುದೆಂದು ಕುಮಾರಸ್ವಾಮಿ ಕೂಡ ಪ್ರಜ್ವಲ್ ಪಾಪ ಕೃತ್ಯಗಳ ಬಗ್ಗೆ ಮಾತನಾಡಲು ಸಿದ್ದರಿರಲಿಲ್ಲ. ಅವರಿಗೆ ಮನೆಯ ಮಾನಕ್ಕಿಂತ ಮಗ ಸೋತಿದ್ದ ಮಂಡ್ಯದಲ್ಲಿ ಗೆದ್ದು ತೋರಿಸಬೇಕೆಂಬ ಹಠವೇ ಮುಖ್ಯವಾಗಿತ್ತು. ತೆರೆಮರೆಯಲ್ಲಿ ಇದ್ದುಕೊಂಡೇ ದೇವೇಗೌಡ, ಕುಮಾರಸ್ವಾಮಿ ಮತ್ತು ರೇವಣ್ಣ ಅವರ ರಾಜಕಾರಣವನ್ನು ನಿರ್ಧರಿಸುವ ಆ ಕುಟುಂಬದ ಹೆಣ್ಣು ಮಕ್ಕಳು ಕೂಡ ಹಾಸನದ ಬೀದಿ ಬೀದಿಯಲ್ಲಿ ಹರಾಜಾದ ಅಮಾಯಕ ಮತ್ತು ಅಸಹಾಯಕ ಮಹಿಳೆಯರ ಮಾನದ ಬಗ್ಗೆ ಅರೆಕ್ಷಣ ಮರುಗಲಿಲ್ಲ. ಪ್ರಜ್ವಲ್‌ಗೆ ಟಿಕೆಟ್ ಕೊಡಬೇಡಿ ಎನ್ನಲಿಲ್ಲ. ‘ಹೃದಯವಂತ’ ಸಿಎನ್ ಮಂಜುನಾಥ್ ಕೂಡ ವಿರೋಧಿಸಲಿಲ್ಲ. ಪ್ರಜ್ವಲ್‌ನನ್ನು ಅಭ್ಯರ್ಥಿ ಮಾಡಿದರೆ ನಾನು ಸ್ಪರ್ಧಿಸುವುದಿಲ್ಲ, ಅವನೊಂದಿಗೆ ಕೂರಲು ನಾನು ಸಿದ್ದನಿಲ್ಲ’ ಎಂದು ಹೇಳಲಿಲ್ಲ.
ಒಟ್ಟಿನಲ್ಲಿ ಆ ಕುಟುಂಬದ ಯಾರೊಬ್ಬರಿಗೂ ಪ್ರಜ್ವಲ್ ಜನಪ್ರತಿನಿಧಿಯಾಗಲು ಅನರ್ಹ ಎನಿಸಲೇ ಇಲ್ಲ. ಪ್ರಜ್ವಲ್ ಎಸಗಿದ ಹೇಯ ಕೃತ್ಯಗಳು ಅಸಹ್ಯ ಎನಿಸಲಿಲ್ಲ…

ಇಷ್ಟೆಲ್ಲಾ ಆದಮೇಲೂ ಈ ಎಲ್ಲಾ ಮಹಾಕ್ರೌರ್ಯಕ್ಕೆ ಕಳಶವಿಟ್ಟಂತೆ ದೇವೇಗೌಡರು ದೆಹಲಿಗೆ ಹೋಗಿ ಬಿಜೆಪಿ ನಾಯಕರನ್ನು ಒಪ್ಪಿಸಿ ಪ್ರಜ್ವಲ್‌ಗೆ ಟಿಕೆಟ್ ಕೊಡಿಸಿದರು. ಅದಕ್ಕಾಗಿ ದೇವೇಗೌಡರು ಎಂಥ ಕೆಲಸ ಮಾಡುವುದಕ್ಕೂ ಸಿದ್ದರಾರಾದರು. ರಾಜ್ಯದ ಹಿತವನ್ನು ತಿಪ್ಪೆಗೆಸೆದರು. ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಮಾಡಿರುವ ಅನ್ಯಾಯವನ್ನು ಹೇಳಲು ಕಾಂಗ್ರೆಸ್ ನಾಯಕರು ‘ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸಿಕ್ಕಿರುವುದು ಚೊಂಬು’ ಎಂಬರ್ಥದ ಜಾಹೀರಾತು ನೀಡಿದಾಗ ಬಿಜೆಪಿಯ ಪುಡಿ ರಾಜಕಾರಣಿಗಳನ್ನು ಮೀರಿಸುವಂತೆ ದೇವೇಗೌಡರು ‘ಕಾಂಗ್ರೆಸ್ ಬಿಟ್ಟು ಹೋಗಿದ್ದ ಚೊಂಬನ್ನು ಮೋದಿ ಅಕ್ಷಯಪಾತ್ರೆ ಮಾಡಿದ್ದಾರೆ’ ಎಂದು ನಿರ್ಲಜ್ಜೆಯಿಂದ ಸಮರ್ಥಿಸಿಕೊಂಡರು. ಇದು ದೇವೇಗೌಡರ ಕುಟುಂಬ ಪ್ರಜ್ವಲ್‌ನ ಎಲ್ಲಾ ಅಪರಾಧಗಳನ್ನು ಮನ್ನಿಸಿ ಆತನಿಗೆ ಮಣೆ ಹಾಕಿದ ಪರಿ…

ಪ್ರಜ್ವಲ್ ಬೆಳೆದದ್ದು ಇವರೆಲ್ಲರ ನೆರಳಿನಲ್ಲಿ. ಹಿಂದೊಮ್ಮೆ ಪ್ರಜ್ವಲ್ ತಾಯಿ ಭವಾನಿ ರೇವಣ್ಣ ತಮ್ಮ ಕಾರಿಗೆ ಢಿಕ್ಕಿ ಹೊಡೆದ ಸ್ಕೂಟರ್ ಸವಾರನನ್ನು ‘ಸುಟ್ಟಾಕಿ’ ಎಂದಿದ್ದರು. ಸ್ಕೂಟರ್ ಸವಾರನಿಗೆ ಏನಾಯ್ತು ಅಂತಾ ಕೇಳುವ ಕನಿಷ್ಟ ಕಾಳಜಿ ತೋರದೆ ‘ಕೋಟಿ ರೂಪಾಯಿ ಕಾರು ಹಾಳಾಯ್ತು’ ಎಂದು ಚೀರಾಡಿದ್ದರು. ತನ್ನ ಕುಟುಂಬಕ್ಕಿರುವ ಅಧಿಕಾರ, ಪ್ರಭಾವ, ಜನ ಬೆಂಬಲದಿಂದಲೇ ಅವರಿಗೆ ಯಾರನ್ನಾದರೂ ಸುಟ್ಟಾಕಬಹುದು ಎನಿಸಿದ್ದು. ಬಡ ಜೀವಕ್ಕಿಂತ ಕೋಟಿ ರುಪಾಯಿಯ ಕಾರು ಮುಖ್ಯ ಎನಿಸಿದ್ದು. ಇಂಥ ಕುಟುಂಬದ ಕೃಪೆಯಿಂದಾಗಿಯೇ ಪ್ರಜ್ವಲ್ ಗೆ ಯಾರನ್ನು ಬೇಕಾದರೂ ಮಂಚಕ್ಕೆ ಕರೆಯಬಹುದು ಎನಿಸಿದ್ದು. ತಾಯಿ ವ್ಯಯಸ್ಸಿನವರು, ಮನೆಗೆಲಸದವರು, ಜೆಡಿಎಸ್ ಕಾರ್ಯಕರ್ತರು, ಜನಪ್ರತಿನಿಧಿಗಳು, ಅಧಿಕಾರಿಗಳು ಭೋಗದ ವಸ್ತುವಿನಂತೆ ಕಂಡದ್ದು. ನಮ್ಮನ್ನು ಯಾರೂ ಕೇಳುವಂತಿಲ್ಲ, ನಾವು ಯಾರಿಗೂ ಉತ್ತರದಾಯಿಗಳಲ್ಲ, ಏನನ್ನು ಬೇಕಾದರೂ ಮಾಡಿ ದಕ್ಕಿಸಿಕೊಳ್ಳಬಹುದು ಎಂಬ ಧೈರ್ಯ ತಂದುಕೊಟ್ಟದ್ದು. ನಮ್ಮ ಕುಟುಂಬ ಇರುವುದೇ ಆಳಲು-ಅಧಿಕಾರ ಉಣ್ಣಲು ಎಂಬ ಹುಂಬತನ ಬರಲು ಕಾರಣವಾದದ್ದು. ಅಂತಿಮವಾಗಿ ನಮಗೆ ಎಂಥ ಕ್ಷುಲ್ಲಕ ಕೆಲಸವೂ ಅಸಹ್ಯವಲ್ಲ ಎನಿಸಿದ್ದು.

ಈಗ ಪ್ರಜ್ವಲ್ ಅತ್ಯಾಚಾರ ಮಾಡಿರುವುದು, ಲೈಂಗಿಕ ದೌರ್ಜನ್ಯ ಎಸಗಿರುವುದು ನ್ಯಾಯಾಲಯದಲ್ಲಿ ಸಾಬೀತಾಗಿದೆ. ‘ನಮಗೆ ಎಲ್ಲಾ ಗೊತ್ತು’, ‘ಸಮಯ ಬಂದಾಗ ಎಲ್ಲರ ಜಾತಕ ಬಿಚ್ಚಿಡುತ್ತೇನೆ’ ಎಂಬಿತ್ಯಾದಿ ರಾಜ್ಯದ ಮುಂಚೂಣಿ ನಾಯಕರು ಸೇರಿ ಮರಿ ರಾಜಕಾರಣಿಗಳನ್ನೂ ಬಿಡದೆ ಬೆದರಿಸುತ್ತಿದ್ದ ದೇವೇಗೌಡರ ಕುಟುಂಬ, ಈಗ ಮೌನಕ್ಕೆ ಶರಣಾಗಿದೆ. ಕುಟುಂಬದ ಕುಡಿ ಮಾಡಿದ ಕುಕೃತ್ಯ ಸಾಬೀತಾಗಿರುವುದರಿಂದ ಕುಗ್ಗಿಹೋಗಿದೆ. ದೊಡ್ಡಗೌಡರು ಸಣ್ಣವರಾಗಿದ್ದಾರೆ. ಜೀವಮಾನವಿಡೀ ಇತರರನ್ನು ಸೋಲಿಸುವುದೇ ಪರಮಗುರಿ ಎಂದುಕೊಂಡು ರಾಜಕಾರಣ ಮಾಡಿದ ದೇವೇಗೌಡರು ಅಂತಿಮವಾಗಿ ತಾವೇ ಸೋಲಿಗೆ ಶರಣಾಗಿದ್ದಾರೆ. ಸೋಲಿಗೆ ಬೇರೆಯದೇ ಅರ್ಥ ಇರುತ್ತದೆ. ದೇವೇಗೌಡರು ಸೋತಿಲ್ಲ, ಶರಣಾಗಿದ್ದಾರೆ. ಕುಟುಂಬದ ಕಬಂಧ ಬಾಹುಗಳಿಂದ ಬಿಡಿಸಿಕೊಳ್ಳುವ ಹೋರಾಟದಲ್ಲಿ ಅವರು ಜಯಗಳಿಸಿದ ಉದಾಹರಣೆಯೇ ಇಲ್ಲ. ಕುಟುಂಬದ ಮೇಲಿನ ಕುರುಡುಪ್ರೀತಿಗೆ ಕಟ್ಟುಬಿದ್ದು ಕಳೆದುಕೊಂಡ ಘಟಾನುಘಟಿ ನಾಯಕರ ಪಟ್ಟಿ ಚಿಕ್ಕದಲ್ಲ. ದೂರವಾದ ತನ್ನದೇ ಜಾತಿಯ ನಾಯಕರು ಒಬ್ಬಿಬ್ಬರಲ್ಲ. ಕುಮಾರಸ್ವಾಮಿ ಬಿಜೆಪಿ ಸಹವಾಸ ಮಾಡಿದಾಗ ‘ಬೇಡ’ ಎನ್ನಲಾಗಲಿಲ್ಲ. ಮೈಸೂರಿನಲ್ಲಿ ಸೋಲಿನ ಸುಳಿವಿದ್ದರೂ ಅಳಿಯ ರಂಗಪ್ಪನಿಗೆ ಟಿಕೆಟ್ ನಿರಾಕರಿಸಲಾಗಲಿಲ್ಲ. ಪ್ರೀತಿಪಾತ್ರ ಪುತ್ರರು ಕಣ್ಣೆದುರೇ ದಾಯಾದಿಗಳಾಗಿ ಬೀದಿ ಕಾಳಗಕ್ಕೆ ಇಳಿಯಲು ಮುಂದಾದಾಗ ಅದನ್ನು ತಪ್ಪಿಸಲೆಂದು ಗಟ್ಟಿ ನೆಲೆಗಳಾದ ಮಂಡ್ಯ-ಹಾಸನ ಬಿಟ್ಟು ತುಮಕೂರಿನಲ್ಲಿ ತಮ್ಮನ್ನು ತಾವೇ ಅದೃಷ್ಟ ಪರೀಕ್ಷೆಗೆ ಒಡ್ಡಿಕೊಳ್ಳುವುದರ ಹೊರತಾಗಿ ಬೇರೆ ದಾರಿ ಇರಲಿಲ್ಲ. ಮಂಡ್ಯದಲ್ಲಿ ನಿಖಿಲ್ ಗೆಲುವು ಸುಲಭವಲ್ಲ ಎಂದು ಗೊತ್ತಿದ್ದರೂ ಕುಮಾರಸ್ವಾಮಿ ಮಾತನ್ನು ಧಿಕ್ಕರಿಸುವ ಸ್ಥಿತಿಯಲ್ಲಿ ಇರಲಿಲ್ಲ. ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಅನ್ನು ಭವಾನಿ ರೇವಣ್ಣ ಅವರಿಗೆ ತಪ್ಪಿಸುವುದರಲ್ಲಿ ಅಂತಿಮವಾಗಿ ಗೆದ್ದದ್ದು ಕುಮಾರಸ್ವಾಮಿ ಅವರೇ ಹೊರತು ದೇವೇಗೌಡರಲ್ಲ. ತೀರಾ ಇತ್ತೀಚಿಗೆ ಇನ್ನೊಬ್ಬ ಅಳಿಯ ಮಂಜುನಾಥ್ ಬಿಜೆಪಿ ಅಭ್ಯರ್ಥಿ ಆಗುವ ವಿಷಯದಲ್ಲೂ ದೇವೇಗೌಡರ ಮಾತಿಗೆ ಅಷ್ಟೇನೂ ಮಹತ್ವ ಇರಲಿಲ್ಲ. ಮಂಜುನಾಥ್, ಅವರ ಪತ್ನಿ ಮತ್ತು ಕುಮಾರಸ್ವಾಮಿ ಮಾತ್ರವೇ ನಿರ್ಣಾಯಕ ಪಾತ್ರವಹಿಸಿದ್ದರು ಎನ್ನುತ್ತಾರೆ ಅವರ ಕುಟುಂಬದ ಸಮೀಪವರ್ತಿಗಳು. ಮೋದಿ ಮತ್ತು ಬಿಜೆಪಿಗೆ ಶರಣಾಗಿದ್ದಾರೆ ಎನ್ನಲು ದೇವೇಗೌಡರು ಬಿಜೆಪಿಯವರನ್ನೂ ಮೀರಿಸುವಂತೆ ಮೋದಿಯ ಹೊಗಳುಭಟ್ಟರಾಗಿರುವುದು, ಜೆಡಿಎಸ್ ಪಕ್ಷ ಮುಂದೆ ಜೀವಂತ ಇರಬೇಕಾದರೆ ಬಿಜೆಪಿ ಎಂಬ ಊರುಗೋಲು ಬೇಕೇಬೇಕು ಎಂದು ನಂಬಿಕೊಂಡಿರುವುದು ಮತ್ತು ಮೈತ್ರಿ ಪಕ್ಷಗಳನ್ನು ಆಪೋಶನ ತೆಗೆದುಕೊಂಡೇ ಬೆಳೆದ ಬಿಜೆಪಿಯನ್ನು ಅವಲಂಬಿಸಿರುವುದಕ್ಕಿಂತ ಬೇರೆ ನಿದರ್ಶನಗಳು ಬೇಕಾಗಿಲ್ಲ.

ದೇವೇಗೌಡರು ಕಾಲವಾದ ಬಳಿಕ ಆ ಕುಟುಂಬ ಒಡೆದು ಹೋಳಾಗಲಿದೆ. ಕುಮಾರಸ್ವಾಮಿ ಬಿಜೆಪಿ ಕಡೆ, ರೇವಣ್ಣ ಕಾಂಗ್ರೆಸ್ ಪಾಳೆಯಕ್ಕೆ ಹೋಗಿಬಿಡುತ್ತಾರೆ. ಜೆಡಿಎಸ್ ಇಬ್ಬಾಗವಾಗುತ್ತದೆ ಎನ್ನುವ ಮಾತುಗಳು ಆಗಾಗ ರಾಜಕೀಯ ಪಡಸಾಲೆಯಲ್ಲಿ ಕೇಳುತ್ತಿರುತ್ತವೆ. ಆದರೆ ಈಗಾಗಲೇ ಅಂಥದೊಂದು ಕಂದಕ ಮೂಡಿದೆ ಮತ್ತು ಅದು ಹಿಗ್ಗುತ್ತಾ ಸಾಗಿದೆ. ಅದಕ್ಕೆ ಇದೇ ಪ್ರಜ್ವಲ್ ಪ್ರಕರಣದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ ಕುಮಾರಸ್ವಾಮಿ ‘ಅವರ (ಎಚ್.ಡಿ. ರೇವಣ್ಣ) ಕುಟುಂಬವೇ ಬೇರೆ, ನಾವೇ ಬೇರೆ’ ಎಂದು ಹೇಳಿದ ಮಾತೇ ಸಾಕ್ಷಿ. ಮುದ್ದಿನ ಮಕ್ಕಳಿಬ್ಬರು ಒಂದೇ ದೋಣಿಯಲ್ಲಿ ಹೋಗಿ ಎಂದು ಹೇಳುವುದು ಕೂಡ ದೇವೇಗೌಡರಿಗೆ ಸಾಧ್ಯವಾಗುತ್ತಿಲ್ಲ. ಪ್ರಜ್ವಲ್ ಅತ್ಯಾಚಾರ ಪ್ರಕರಣ ದೇವೇಗೌಡರ ಕುಟುಂಬವನ್ನು ಈಗಾಗಲೇ ಕಾಡುತ್ತಿದ್ದ ಅತಂತ್ರ ಮತ್ತು ಅಭದ್ರ ಸ್ಥಿತಿ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ. ನ್ಯಾಯಾಲಯ ಪ್ರಜ್ವಲ್ ಹೆಸರನ್ನು ಮಾತ್ರ ಅಪರಾಧಿ ಎಂದು ಘೋಷಿಸಿರಬಹುದು. ಆದರೆ ಆತನ ಕುಟುಂಬದವರಿಗೆ ತಾವ್ಯಾರೂ ಪರೋಕ್ಷ ಅಪರಾಧಿಗಳಲ್ಲ, ಪ್ರಜ್ವಲ್ ಪಾಪ ಕೃತ್ಯದಲ್ಲಿ ತಮ್ಮ ಪಾತ್ರ ಇಲ್ಲ ಎಂದು ಹೇಳುವ ಧೈರ್ಯವಿದೆಯೇ? ಹಾಗಾಗಿ ಇದು ದೇವೇಗೌಡರ ಕುಟುಂಬಕ್ಕೆ ಮಾತ್ರವಲ್ಲ, ದೇಶದ ರಾಜಕಾರಣದಲ್ಲಿರುವ ಎಲ್ಲಾ feudal familyಯ ನಾಯಕರಿಗೆ ಮತ್ತು ಅವರ ಮಕ್ಕಳಿಗೆ ಪಾಠ…

ಇತಿಹಾಸ ಮತ್ತು ವರ್ತಮಾನದ ಸಂಬಂಧ ತುಂಬಾ ವಿಚಿತ್ರವಾದುದು. ವರ್ತಮಾನದಲ್ಲಿ ಒಳಿತು ಮಾಡಿದ ಮಹನೀಯರನ್ನು ವರ್ತಮಾನ ಮರೆತರೂ ಇತಿಹಾಸ ಸ್ಮರಿಸುತ್ತದೆ. ಆದರೆ ಕೆಡಕು ಮಾಡಿದರೆ ಇತಿಹಾಸ ಬೇಕಾಗುವುದಿಲ್ಲ, ವರ್ತಮಾನವೇ ಶಿಕ್ಷಿಸಿಬಿಡುತ್ತದೆ. ಕಡೆಯ ಪಕ್ಷ ಕೆಲವರ ವಿಷಯದಲ್ಲಾದರೂ… ಇದು ಎಲ್ಲಾ ಕಾಲಕ್ಕೂ ನಡೆದುಕೊಂಡುಬಂದಿದೆ.

✍️ ಧರಣೀಶ್ ಬೂಕನಕೆರೆ
(ರಾಜಕೀಯ ವಿಶ್ಲೇಷಕರು)

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments