ವಿಜಯಪುರ : ವಿಜಯಪುರ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಹೋರಾಟಗಾರರ ಮೇಲೆ ಪೊಲೀಸರು ದಾಖಲಿಸಿರುವ ಸುಳ್ಳು ಪ್ರಕರಣಗಳ ಕುರಿತು ನ್ಯಾಯಾಲಯದಲ್ಲಿ ವಾದ ಮಂಡಿಸಿ ಎಲ್ಲ ಹೋರಾಟಗಾರರಿಗೆ ಜಾಮೀನು ಕೊಡಿಸಿರುವ ನ್ಯಾಯವಾದಿಗಳಾದ ರಘುನಂದನ ಪಾಂಡೆ ಹಾಗೂ ಜಾಮೀನುದಾರರಾದ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಅವರಿಗೆ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಹೋರಾಟ ಸಮಿತಿಯಿಂದ ವಿಜಯಪುರ ನಗರದಲ್ಲಿ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು.
ಸನ್ಮಾನ ಸ್ವೀಕರಿಸಿ ನ್ಯಾಯವಾದಿ ರಘುನಂದನ ಪಾಂಡೆ ಅವರು ಮಾತನಾಡಿ ವಿಜಯಪುರ ಸರ್ಕಾರಿ ವೈದಿಕೀಯ ಮಹಾವಿದ್ಯಾಲಯ ಸ್ಥಾಪನಾ ಹೋರಾಟವು ಜನಪರ ಹೋರಾಟವಾಗಿದ್ದು ಹೋರಾಟಗಾರರು ಯಾವುದೇ ಕಾರಣಕ್ಕೆ ಅಂಜುವ ಅವಶ್ಯಕತೆ ಇಲ್ಲ. ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟಗಾರರ ಪರವಾಗಿ ತಾವು ನ್ಯಾಯಾಲಯದಲ್ಲಿ ಮೊಕದ್ದಮೆ ರದ್ದಾಗುವವರೆಗೆ ಯಾವುದೇ ಸಂಭಾವನೆ ಪಡೆಯದೇ ಪ್ರಕರಣ ನಡೆಸುವುದಾಗಿ ತಿಳಿಸಿದ ಅವರು ನಾನು ಮೊದಲಿನಿಂದಲೂ ಜಿಲ್ಲೆಯಲ್ಲಿ ಎಲ್ಲ ಹೋರಾಟಗಾರರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ಇತ್ಯರ್ಥ ಮಾಡಿಸಿಕೊಟ್ಟಿದ್ದೇನೆ.ಮುಂದೆಯೂ ಕೊಡುತ್ತೇನೆ ಎಂದು ಭರವಸೆ ನೀಡಿದರು.
ಜನಪರ ಹೋರಾಟಗಾರರು ಬಂಧನಕೊಳಗಾದಾಗ ಜಾಮೀನು ನೀಡಲು ಮುಂದೆ ಬಂದಿರುವ ಮಲ್ಲಿಕಾರ್ಜುನ ಕೆಂಗನಾಳ ಅವರ ಕಾರ್ಯ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಅವರು ಮಾತನಾಡಿ ಪಿಪಿಪಿ ವಿರುದ್ಧದ ಹಾಗೂ ಸರಕಾರಿ ವೈದಿಕೀಯ ಕಾಲೇಜ್ ಸ್ಥಾಪನಾ ಹೋರಾಟವು ಜಿಲ್ಲೆಯ ಜನರ ಹೋರಾಟವಾಗಿದೆ. ಹೋರಾಟಗಾರರ ಬಂಧನದ ಹಿಂದೆ ರಾಜಕೀಯ ಷಡ್ಯಂತ್ರ ಇರುವುದು ಜಿಲ್ಲೆಯ ಜನರಿಗೆ ಗೊತ್ತಿರುವ ಸಂಗತಿ. ಜನರ ಪರವಾಗಿ ಹೋರಾಟ ಮಾಡಿದ ಹೋರಾಟಗಾರರ ಮೇಲೆ ಸುಳ್ಳು ಕೇಸ್ ಹಾಕಿಸಿ ಜೈಲು ಸೇರುವಂತೆ ಮಾಡಿದ ಕ್ರಮ ಖಂಡನೀಯವಾದುದು ಎಂದು ಹೇಳಿದರು.
ಜಿಲ್ಲೆಯ ಮಕ್ಕಳ ವೈದ್ಯಕೀಯ ಶಿಕ್ಷಣದ ಹಕ್ಕು ಮತ್ತು ಸಾರ್ವಜನಿಕರ ಆರೋಗ್ಯ ಸೇವೆಯನ್ನು ಉಳಿಸಲು ಹೋರಾಟಗಾರರು ಮಾಡಿದ ತ್ಯಾಗ ಬೆಲೆ ಕಟ್ಟಲಾಗದಂತಹದು. ರಾಜಕಾರಣಿಗಳು ಹೆಣೆದ ಷಡ್ಯಂತ್ರ ಹೋರಾಟಗಾರರನ್ನು ಮಾತ್ರ ಜೈಲಿಗೆ ಹಾಕಲಿಲ್ಲ, ಸಂವಿಧಾನ ಬದ್ದ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸ ಮಾಡಿದರು. ಇದು ಜಿಲ್ಲೆಯ ಜನರ ಭಾವನೆಗಳಿಗೆ ದೊಡ್ಡ ಧಕ್ಕೆಯುಂಟು ಮಾಡಿತು.ಜನವರಿ 1 ವಿಜಯಪುರ ಜಿಲ್ಲೆಯ ಇತಿಹಾಸದಲ್ಲಿ ಪ್ರಜಾಪ್ರಭುತ್ವ ವಿರೋಧಿ ಕರಾಳ ದಿನವಾಯಿತು ಎಂದರು.
ಜನಪರ ಹೋರಾಟಗಾರರ ಪರ ನಿಲ್ಲಬೇಕಾಗಿರುವುದು ಪ್ರಜ್ಞಾವಂತ ನಾಗರೀಕರ ಕರ್ತವ್ಯವಾಗಿದೆ. ನಾನು ನನ್ನ ಕರ್ತವ್ಯ ನಿರ್ವಹಿಸಿದ್ದೇನೆ ಎಂದು ಹೇಳಿದ ಅವರು ಜಿಲ್ಲೆಯ ಹೋರಾಟಗಾರರು ಯಾವುದಕ್ಕೂ ಅಂಜದೆ ಜಿಲ್ಲೆಯ ಸಮಸ್ಯೆಗಳ ವಿರುದ್ಧ ಹೋರಾಟಗಳನ್ನು ಹಮ್ಮಿಕೊಳ್ಳುವುದನ್ನು ಬಿಡಬಾರದು. ಹೋರಾಟಗಾರರ ಮೇಲೆ ದಾಖಲಾಗುವ ಎಲ್ಲ ಪ್ರಕರಣಗಳಿಗೆ ತಾವು ಜಾಮೀನು ನೀಡಲು ಸದಾ ಸಿದ್ಧವಾಗಿರುತ್ತೇನೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಹೋರಾಟ ಸಮಿತಿ ಸದಸ್ಯರುಗಳಾದ ಜಗದೇವ ಸೂರ್ಯವಂಶಿ ಮತ್ತು ಲಕ್ಷ್ಮಣ ಕಂಬಾಗಿ ಅವರು ಮಾತನಾಡಿ ಜಿಲ್ಲೆಯಲ್ಲಿನ ಸರಕಾರಿ ಆಸ್ಪತ್ರೆಗೆ ಸೇರಿದ ಜಾಗ ಖಾಸಗಿ ವ್ಯಕ್ತಿಗಳ ಸ್ವತ್ತಾಗಬಾರದು, ಸರಕಾರದಿಂದಲೇ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ ಮಾಡಬೇಕು ಎಂಬ ಏಕೈಕ ಬೇಡಿಕೆ ಇಟ್ಟುಕೊಂಡು ನಾವು ಹೋರಾಟ ಮಾಡಿದ್ದೇವೆ. ಜಿಲ್ಲೆಯ ಜನ ನಮ್ಮ ಹೋರಾಟದ ಪರ ನಿಂತಿದ್ದಾರೆ. ಮುಖ್ಯಮಂತ್ರಿಗಳು ನಮ್ಮ ಹೋರಾಟಕ್ಕೆ ಮಣಿದು ಜಿಲ್ಲೆಗೆ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಘೋಷಣೆ ಮಾಡಿದ್ದಾರೆ. ಇದು ಜಿಲ್ಲೆಯ ಜನರ ಗೆಲವು ಎಂದು ಹೇಳಿದರು.
ನಮ್ಮ 27 ಜನ ಹೋರಾಟಗಾರರ ಮೇಲೆ ದಾಖಲಾಗಿದ್ದ ಪ್ರಕರಣದಲ್ಲಿ ಗೃಹ ಬಂಧನಕ್ಕೆ ಒಳಗಾಗಿದ್ದ 6ಜನ ಹೋರಾಟಗಾರರು ಸೇರಿ ಎಲ್ಲ 27 ಜನ ಹೋರಾಟಗಾರರಿಗೆ ಜಾಮೀನು ಕೊಡಿಸಿದ ನ್ಯಾಯವಾದಿ ರಘುನಂದನ ಪಾಂಡೆ, ಹಾಗೂ ಜಾಮೀನು ನೀಡಿದ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಅವರಿಗೆ ಎಷ್ಟು ಅಭಿನಂದನೆ ಸಲ್ಲಿಸಿದರೂ ಕಡಿಮೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಹೋರಾಟ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ ಎಚ್.ಟಿ, ವಿನೋದ ಖೇಡ, ಮೀನಾಕ್ಷಿ ಶಿಂಗೆ, ಕಾವೇರಿ ರಜಪೂತ, ಪ್ರಭುಗೌಡ ಪಾಟೀಲ, ಜ್ಯೋತಿ ಮಿಣಜಗಿ, ಲಾಯಪ್ಪ ಇಂಗಳೆ, ಗಿರೀಶ ಕಲಘಟಗಿ, ಸಲೀಂ ಹೊಕ್ರಾಣಿ, ಸುನಿತಾ ಮೋರೆ, ಸಿದ್ರಾಮಯ್ಯ ಹಿರೇಮಠ, ಲಿಂಗರಾಜ ಬಿದರಕುಂದಿ, ಸಂಜೀವಕುಮಾರ ಶಟಗಾರ, ಅದ್ಬುಲ್ ರೆಹಮಾನ್ ನಾಶೀರ, ಚನ್ನು ಕಟ್ಟಿಮನಿ, ಚಿದಾನಂದ ಅವಟಿ, ಮಲ್ಲಿಕಾರ್ಜುನ ಬಟಗಿ, ಶ್ರೀಕಾಂತ ಕೊಂಡಗೂಳಿ, ಸಂತೋಷ ಕಲಗುಡಿ, ಮಲ್ಲಿಕಾರ್ಜುನ ಲಂಗೂಟಿ, ಎಂ.ಬಿ. ಉಮರಾಣಿ, ಅನೀಲ ಪವಾರ, ಐ.ಬಿ. ಜಾಲವಾದಿ, ರೇಣುಕಾ ಕೋಟ್ಯಾಳ, ಸುನಂದಾ ರಾಠೋಡ, ಕಾಮಿನಿ ಕಸಬೆ, ರಾಜು ತಡಲಗಿ, ವಿನಯ ಪಾಟೀಲ, ಅನೀಲಕುಮಾರ ಆರ್.ಎಸ್. ಅಂಜಲಿ ತಳಕೇರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

