ದಾವಣಗೆರೆ:
ಸಾರ್ವಜನಿಕರ ಹಣಕ್ಕೆ ಭದ್ರತೆಯನ್ನು ನೀಡುವುದಕ್ಕಾಗಿ ಖಾಸಗಿ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಬೇಕು, ಅಗತ್ಯ ಪ್ರಮಾಣದ ನೇಮಕಾತಿ ಮಾಡಬೇಕು, ಪೆಡರಲ್ ಬ್ಯಾಂಕಿನ ನೌಕರರ ಶೋಷಣೆಯನ್ನು ನಿಲ್ಲಿಸಬೇಕು, ಕೆಥೋಲಿಕ್ ಸಿರಿಯನ್ ಬ್ಯಾಂಕ್ ನೌಕರರ ವೇತನ ಪರಿಷ್ಕರಣೆ ಮಾಡಬೇಕು, ಖಾಸಗಿ ಬ್ಯಾಂಕುಗಳ ನಿವೃತ್ತ ನೌಕರರಿಗೆ ಸೌಲಭ್ಯಗಳನ್ನು ವಿಸ್ತರಿಸಬೇಕು, ನೈನಿತಾಲ್ ಬ್ಯಾಂಕನ್ನು ಮಾರಾಟ ಮಾಡಬಾರದು, ತಮಿಳುನಾಡು ಮರ್ಕಂಟೈಲ್ ಬ್ಯಾಂಕಿನ ನೌಕರರ ನಿವೃತ್ತಿ ವಯಸ್ಸನ್ನು 60 ಕ್ಕೆ ಹೆಚ್ಚಿಸಬೇಕು, ನೌಕರರಿಗೆ ಉದ್ಯೋಗ ಭದ್ರತೆ ಒದಗಿಸಬೇಕು ಎನ್ನುವ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ – ಎಐಬಿಇಎ ಸದಸ್ಯರು ಇಂದು ರಾಷ್ಟ್ರವ್ಯಾಪಿ ಪ್ರತಿಭಟನಾ ಮತಪ್ರದರ್ಶನವನ್ನು ನಡೆಸಿ ಸರಕಾರವನ್ನು ಆಗ್ರಹಿಸಿದರು.
ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ನೇತೃತ್ವದಲ್ಲಿ ಬ್ಯಾಂಕ್ ನೌಕರರು ಪಿ.ಪಿ.ರಸ್ತೆಯಲ್ಲಿರುವ ಕರ್ಣಾಟಕ ಬ್ಯಾಂಕಿನ ಮುಂಭಾಗ ಪ್ರತಿಭಟನೆ ನಡೆಸಿದರು. ಎಐಬಿಇಎ ಸಂಯೋಜಿತ ಖಾಸಗಿ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು ಇಂದು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿತ್ತು.
ಪ್ರತಿಭಟನೆಯಲ್ಲಿ ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ, ಖಜಾಂಚಿ ಕೆ.ವಿಶ್ವನಾಥ ಬಿಲ್ಲವ, ಕಾರ್ಯದರ್ಶಿ ಹೆಚ್.ಎಸ್.ತಿಪ್ಪೇಸ್ವಾಮಿ, ಆರ್.ಆಂಜನೇಯ, ಎಂ.ಡಿ.ವಿದ್ಯಾಸಾಗರ, ಆರ್.ಮಂಜಪ್ಪ, ಹೆಚ್.ಜೆ.ಆಶಾ, ರಾಜೇಶ್, ಕೆ.ಆರ್.ಹರ್ಷ, ಡಿ.ಹರ್ಷದ್, ಎಸ್.ಪ್ರಶಾಂತ್, ಸೈಯದ್ ಚಾಂದಬಾಷಾ, ಎಸ್.ಗಜೇಂದ್ರ, ಎಲ್.ಲತಾ, ಕೆ.ಹೆಚ್.ರೇಖಾ, ಹೆಚ್.ಎಸ್.ಶ್ರೀನಿಧಿ, ಪ್ರಸನ್ನ ಭಟ್, ಎಂ.ಕೆ.ನಾಗರಾಜ್ ಹಾಗೂ ನಿವೃತ್ತ ಬ್ಯಾಂಕ್ ನೌಕರರ ಸಂಘದ ಹೆಚ್.ಸುಗುರಪ್ಪ, ಕೆ.ಎಂ.ಮಹೇಶ್ವರಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು

