ಹುಣಸಗಿ : ತಾಲ್ಲೂಕಿನ ಗೆದ್ದಲಮರಿ, ಜುಮಲಪೂರ ಗ್ರಾಮಗಳಲ್ಲಿ ಗುರುವಾರ ಸಂಜೆ ಸುರಿದ ಮಳೆಗೆ ಹಾನಿಗೊಳಗಾದ ಭತ್ತದ ಗದ್ದೆ ವೀಕ್ಷಣೆಗೆ ಸುರಪುರ ಮತಕ್ಷೇತ್ರದ ಶಾಸಕರ ಸುಪುತ್ರ ಶ್ರೀ ರಾಜಾ ವೇಣುಗೋಪಾಲ ನಾಯಕ ರವರು, ಭೇಟಿ ನೀಡಿ ಪರಿಶೀಲಿಸಿದರು.
ನಂತರ ಪರಿಶೀಲನೆಯಲ್ಲಿ ಭಾಗಿಯಾದ ಕಂದಾಯ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿ ತಾಲೂಕಿನಲ್ಲಿ ಗುರುವಾರ ಸಂಜೆ ಸುರಿದ ಭಾರಿ ಮಳೆಗೆ ರೈತರ ಜಮೀನಿನಲ್ಲಿ ಇರುವ ಭತ್ತದ ಬೆಳೆ ನೆಲಕಚ್ಚಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು ರೈತರಿಗೆ ಮತ್ತಷ್ಟು ಹಾನಿಯುಂಟಾಗಿದೆ.
ಹಾಗಾಗಿ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ಅಧಿಕಾರಿಗಳು ತಕ್ಷಣವೇ ಬೆಳೆ ಹಾನಿಯಾದ ರೈತರಿಗೆ ಆದಷ್ಟು ಬೇಗ ಪರಿಹಾರ ನೀಡಲು ಶೀಘ್ರ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ತಹಸೀಲ್ದಾರ ಬಸಲಿಂಗಪ್ಪ ನೈಕೋಡಿ ಮಾತನಾಡಿ ಕಂದಾಯ ಹಾಗೂ ಕೃಷಿ ಇಲಾಖೆಯ ಜಂಟಿಯಾಗಿ ಬೆಳೆ ಸಮೀಕ್ಷೆ ನಡೆಯುತ್ತಿದ್ದು ಬೆಳೆ ಹಾನಿಗೊಳಗಾದ ರೈತರು ಅಗತ್ಯ ದಾಖಲೆಗಳನ್ನು ನಾಡ ಕಚೇರಿಗೆ ತಲುಪಿಸುವಂತೆ ಅಲ್ಲಿಯೇ ಇದ್ದ ರೈತರಿಗೆ ಹೇಳಿದರು.
ಈ ವೇಳೆ ಕೃಷಿ ಇಲಾಖೆಯ ಅಧಿಕಾರಿಗಳು, ಗ್ರಾಮಾಡಳಿತಾಧಿಕಾರಿಗಳು, ಸೇರಿದಂತೆ ರೈತಾಪಿ ವರ್ಗ ಹಾಗೂ ಕಾಂಗ್ರೆಸ್ ಮುಖಂಡರು ಇದ್ದರು.

