ದಾವಣಗೆರೆ: ದಾವಣಗೆರೆಯ ಎಂ. ಸಿ. ಕಾಲೋನಿಯಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ ಮಾಸಿಕ ಸಭೆ ನಡೆಯಿತು. ಮೇಯರ್ ಕೆ. ಚಮನ್ ಸಾಬ್ ಅವರು ಜಲಸಿರಿ, ಕಂದಾಯ, ಪಾರ್ಕ್, ಇ- ಸ್ವತ್ತು ಸೇರಿದಂತೆ ಹಲವು ವಿಚಾರಗಳ
ಕುರಿತಂತೆ ಚರ್ಚಿಸಿದರು.
ಈ ವೇಳೆ ಮಾತನಾಡಿದ ಕೆ. ಚಮನ್ ಸಾಬ್ ಅವರು, ಶೀಘ್ರದಲ್ಲಿಯೇ ಎಂಸಿಸಿ ಬಿ ಬ್ಲಾಕ್ ನ ಈಜುಕೊಳದ ಆವರಣದಲ್ಲಿ ಕಂದಾಯ ವಸೂಲಾತಿ, ಇ-ಸ್ವತ್ತು ನೀಡುವ ಹಾಗೂ ಜಲಸಿರಿ ಯೋಜನೆಯ ಸಾಧಕ – ಬಾಧಕಗಳ ಕುರಿತಂತೆ ಸಮಸ್ಯೆ ತಿಳಿದುಕೊಳ್ಳಲು ಹಾಗೂ ಪರಿಹರಿಸಲು ಒಂದು ದಿನ ಆಂದೋಲನ ಆಯೋಜಿಸಲಾಗುವುದು ಎಂದು ತಿಳಿಸಿದರು.
ಎಂಸಿಸಿ ಬಿ ಬ್ಲಾಕ್, ಎಂಸಿಸಿ ಎ ಬ್ಲಾಕ್ ಸೇರಿದಂತೆ ಎಲ್ಲಾ ವಾರ್ಡ್ ಗಳ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇವೆ. ಎಂಸಿಸಿ ಬಿ ಬ್ಲಾಕ್ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಎಂಸಿಸಿ ಬಿ ಬ್ಲಾಕ್ ಸದಸ್ಯ ಜಿ. ಎಸ್. ಮಂಜುನಾಥ್ ಗಡಿಗುಡಾಳ್ ಅವರು ಈ ಭಾಗದಲ್ಲಿ ಜನಪರ, ಸಮಾಜಮುಖಿ ಹಾಗೂ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಅಭಿವೃದ್ದಿ ವಿಚಾರ ಬಂದರೆ ರಾಜಿ ಆಗುವುದಿಲ್ಲ. ಸ್ನೇಹಪೂರ್ವಕ ಹಾಗೂ ಪ್ರೀತಿಪೂರ್ವಕವಾಗಿ ನಮ್ಮ ಮೇಲೆ ಒತ್ತಡ ಹೇರಿ ಕೆಲಸ ಮಾಡಿಸುತ್ತಾರೆ. ಸಮಸ್ಯೆಗಳಿದ್ದರೆ ಪರಿಹರಿಸುವವರೆಗೂ ವಿರಮಿಸುವುದಿಲ್ಲ. ಅಷ್ಟು ಜನಪರ ಕಾರ್ಪೊರೇಟರ್. ಉತ್ತಮ ಪಾಲಿಕೆ ಸದಸ್ಯ ಎಂದು ಎಲ್ಲರಿಂದಲೂ ಕರೆಯಿಸಿಕೊಳ್ಳುವ ಮಂಜುನಾಥ್ ಅವರಂಥ ಜನಪರ ನಾಯಕನಿಗೆ ನಿಮ್ಮ ಬೆಂಬಲ ಸದಾ ಇರಲಿ ಎಂದು ಹೇಳಿದರು.
ಮಂಜುನಾಥ್ ಗಡಿಗುಡಾಳ್ ಮಾತನಾಡಿ, ವಾರ್ಡ್ ನ ಜನರು ನನ್ನನ್ನು ಮನೆ ಮಗನಂತೆ ನೋಡುತ್ತಾರೆ. ಎಲ್ಲೇ ಹೋದರೋ ಪ್ರೀತಿ, ವಿಶ್ವಾಸ ತೋರುತ್ತಾರೆ. ಅವರು ತೋರಿಸಿದ ಪ್ರೀತಿ, ವಿಶ್ವಾಸ ಹಾಗೂ ಕೊಟ್ಟ ಗೌರವದಿಂದಲೇ ಇಷ್ಟೊಂದು ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗಿದೆ. ಅವರೊಟ್ಟಿಗಿನ ಸಂಪರ್ಕ, ಸಂಬಂಧ ಯಾವಾಗಲೂ ಇದೇ ರೀತಿಯಲ್ಲಿ ಮುಂದುವರಿಯುತ್ತದೆ. ಮನೆ ಬಾಗಿಲಿಗೆ ನಿಮ್ಮ ಸೇವಕ ಅಭಿಯಾನ ನಡೆಸಿ ಜನರ ಸಮಸ್ಯೆ ಆಲಿಸಿ ಪರಿಹರಿಸುವ ಕೆಲಸ ಮಾಡಿದ್ದೇನೆ. ರಾಜ್ಯಮಟ್ಟದಲ್ಲಿಯೇ ಇದು ಪ್ರಥಮ ಅಭಿಯಾನ. ಇದು ಯಶಸ್ವಿಯಾಗಲು ವಾರ್ಡ್ ನ ಜನರೇ ಕಾರಣ ಎಂದು ಸಂತಸ ವ್ಯಕ್ತಪಡಿಸಿದರು.
ಅಂದನೂರು ಮುಪ್ಪಣ್ಣ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಎಲ್ಲಾ ಕಾರ್ಯಕಾರಿ ಮಂಡಳಿಯ ಪದಾಧಿಕಾರಿಗಳು ಹಾಜರಿದ್ದರು. ಇದೇ ವೇಳೆ ಮಹಾಪೌರರಾದ ಕೆ. ಚಮನ್ ಸಾಬ್, ಪಾಲಿಕೆ ಸದಸ್ಯ ಮಂಜುನಾಥ್ ಗಡಿಗಾಡಾಳ್, ಉಪಮೇಯರ್ ಸೋಗಿ ಶಾಂತಕುಮಾರ್ ಅವರಿಗೆ ಎಂ. ಸಿ. ಕಾಲೋನಿಯ ನಾಗರಿಕ ಹಿತರಕ್ಷಣಾ ವೇದಿಕೆಯ ವತಿಯಿಂದ ಶಾಲು ಹೊದಿಸಿ, ಹೂವಿನ ಹಾರ ಹಾಕಿ ಸನ್ಮಾನಿಸಲಾಯಿತು ಎಂದು ಮಹಾನಗರಪಾಲಿಕೆ ಸದಸ್ಯರಾದ ಶ್ರೀ ಮಂಜುನಾಥ್ ಗಡಿಗುಡಾಳ್ ರವರು ತಿಳಿಸಿದ್ದಾರೆ.