ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣವು ಕರ್ನಾಟಕ ಸರ್ಕಾರದಿಂದ ಸ್ಥಾಪಿತವಾದ ಅಧಿಕೃತ ರಂಗಸಂಸ್ಥೆ. ದಾವಣಗೆರೆಯ ಜಿಲ್ಲಾಡಳಿತ ಭವನದಲ್ಲಿ ಕಚೇರಿ ಹೊಂದಿದ್ದು, ನಾಟಕಗಳ ಸಿದ್ಧತೆ, ರಂಗತರಬೇತಿ, ರಂಗಪ್ರದರ್ಶನ ಹಾಗೂ ರಂಗಶಿಬಿರಗಳು ಹೀಗೆ ಸಂಪೂರ್ಣ ರಂಗಚಟುವಟಿಕೆಗಳಲ್ಲಿ ನಿರತಗೊಂಡಿದೆ. ಸದರಿ ರಂಗಾಯಣವು ಸಿದ್ಧಪಡಿಸುವ ನಾಟಕಗಳ ತರಬೇತಿಗೆ ತೊಡಗಿಸಿಕೊಳ್ಳಲು, 12 ಜನ ಕಲಾವಿದರುಗಳನ್ನು ಆಯ್ಕೆ ಮಾಡಿಕೊಂಡು ರಂಗ ಚಟುವಟಿಕೆಗಳನ್ನು ತೀವ್ರಗೊಳಿಸಲಾಗುತ್ತದೆ.
ಕಲಾವಿದರ ಆಯ್ಕೆಯ ನಿಬಂಧನೆಗಳು:
- ಮಹಿಳೆಯರು ಸೇರಿದಂತೆ 12 ಜನ ರನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಕಲಾವಿದರನ್ನು ಗೌರವ ಸಂಭಾವನೆ ಆಧಾರದಲ್ಲಿ ಆಯ್ಕೆ ಮಾಡಿಕೊಳ್ಳಲಾಗುವುದು.
- ರಂಗ ಪರಿಣತಿಯೇ ಪ್ರಥಮ ಅರ್ಹತೆ. ರಂಗಶಿಕ್ಷಣದ ಅರ್ಹತೆಗಳು ಅಪೇಕ್ಷಣೀಯ ಹೊರತು ಕಡ್ಡಾಯವಲ್ಲ, ರಂಗಪ್ರಯೋಗಗಳಲ್ಲಿ ಭಾಗವಹಿಸಿದವರಿಗೆ ಆದ್ಯತೆಯನ್ನು ನೀಡಲಾಗುವುದು.
- ಪಾರಂಪರಿಕ ಕಲೆಯ ಕುಟುಂಬಗಳಿಂದ ಬಂದ ಕಲಾವಿದರಿಗೆ ಆದ್ಯತೆ ನೀಡಲಾಗುವುದು.
- ಆಯ್ಕೆಯಾದ ಕಲಾವಿದರಿಗೆ ಸಂಭಾವನೆಯಾಗಿ ತಿಂಗಳಿಗೆ ರೂ. 15,000/- (ರೂ. ಹದಿನೈದು ಸಾವಿರ ಮಾತ್ರ) ಗಳನ್ನು ನೀಡಲಾಗುವುದು.
- ಈ ಆಯ್ಕೆಯು ಸಂಪೂರ್ಣವಾಗಿ ತಾತ್ಕಾಲಿಕವಾಗಿರುತ್ತದೆ.
- ಕಲಾವಿದರ ಆಯ್ಕೆಯನ್ನು ಪಾರದರ್ಶಕವಾಗಿ ರಂಗಸಮಾಜವು, ರಂಗಾಯಣ ನಿರ್ದೇಶಕರ ಅಧ್ಯಕ್ಷತೆಯಲ್ಲಿ ರಚಿಸುವ ಉಪಸಮಿತಿಯು ಆಯ್ಕೆ ಮಾಡುತ್ತದೆ. ತರಬೇತಿಯ ಅವಧಿಯಲ್ಲಿ ಯಾವುದೇ ಕಲಾವಿದರ ನಡವಳಿಕೆ ಅನಪೇಕ್ಷಿತವೆಂದು ಕಂಡುಬಂದಲ್ಲಿ, ಅಂತಹ ಕಲಾವಿದರನ್ನು ತಕ್ಷಣದಲ್ಲಿ ತೆಗೆದು ಹಾಕುವ ಅಧಿಕಾರ ದಾವಣಗೆರೆ ರಂಗಾಯಣ ಹಾಗೂ ರಂಗಸಮಾಜಕ್ಕೆ ಇರುತ್ತದೆ.
- ಇವು ಸರ್ಕಾರದ ಖಾಯಂ ಹುದ್ದೆಗಳಾಗಿರುವುದಿಲ್ಲ. ಆಯ್ಕೆಯಾದ ಕಲಾವಿದರು ರಂಗಸಮಾಜವು ವಿಧಿಸುವ ಷರತ್ತುಗಳಿಗೆ ಬದ್ಧರಾಗಿರುತ್ತಾರೆ.
- ಅರ್ಹತೆಯುಳ್ಳ 20 ರಿಂದ 35 ವರ್ಷದೊಳಗಿನ ವಯೋಮಿತಿಯುಳ್ಳ ಆಸಕ್ತ ಕಲಾವಿದರನ್ನು ರಂಗಾಯಣದ ನಿಯಮಾನುಸಾರ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
- ಆಯ್ಕೆಯಾದ ಕಲಾವಿದರು ಆಯಾ ರಂಗಾಯಣದ ನಿರ್ದೇಶಕರ ಹಾಗೂ ವಿಶೇಷಾಧಿಕಾರಿಯವರ ಆಡಳಿತ ನಿಯಂತ್ರಣಕ್ಕೆ ಒಳಪಟ್ಟಿರುತ್ತಾರೆ.
- ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ.
ಆಸಕ್ತ ಕಲಾವಿದರು, ನಿರ್ದೇಶಕರು ವೃತ್ತಿ ರಂಗಭೂಮಿ ರಂಗಾಯಣ ದಾವಣಗೆರೆ ಇವರಿಗೆ ಮನವಿ ಅರ್ಜಿ ಹಾಗೂ ಅಗತ್ಯ ದಾಖಲೆಗಳನ್ನು ದಿನಾಂಕ: 19.09.2025, ಸಂಜೆ 5:30 ಗಂಟೆಯೊಳಗೆ ತಲುಪುವಂತೆ ವಿಶೇಷಾಧಿಕಾರಿಗಳು, ವೃತ್ತಿ ರಂಗಭೂಮಿ ರಂಗಾಯಣ, ಕೊಠಡಿ ಸಂಖ್ಯೆ: 38ಎ, ಜಿಲ್ಲಾಡಳಿತ ಭವನ, ದಾವಣಗೆರೆ-577006 ಈ ವಿಳಾಸಕ್ಕೆ ಅಥವಾ ಇ-ಮೇಲ್ : dvgrangayana@gmail.com ಗೆ ಅರ್ಜಿ ಸಲ್ಲಿಸಬಹುದಾಗಿದೆ. ದಿ. 20.09.2025 ರಂದು ಬೆಳಗ್ಗೆ 10:30 ಕ್ಕೆ ವೃತ್ತಿ ರಂಗಭೂಮಿ ರಂಗಾಯಣ, ಕೊಠಡಿ ಸಂಖ್ಯೆ: 38ಎ, ಮೊದಲನೆ ಮಹಡಿ ಜಿಲ್ಲಾಡಳಿತ ಭವನ ದಾವಣಗೆರೆ ಇಲ್ಲಿ ಸಂದರ್ಶನ ಜರುಗುವುದು. ಆಯ್ಕೆಯಾದ ಅಭ್ಯರ್ಥಿಗಳು ರಂಗಾಯಣದ ನಿಯಮ ಹಾಗೂ ಷರತ್ತುಗಳಿಗೆ ಬದ್ಧರಾಗಿರಬೇಕು.
ಸಂದರ್ಶನದ ವೇಳೆ ಹಾಜರಪಡಿಸಬೇಕಾದ ಮೂಲ ದಾಖಲೆಗಳು
- ಜನ್ಮ ದಿನಾಂಕ ದೃಢೀಕರಣ ಪತ್ರ
- ಎನ್.ಎಸ್.ಡಿ/ಡಿಪ್ಲೋಮಾ ಪ್ರಮಾಣಪತ್ರ (ತರಬೇತಿ ಹೊಂದಿದವರು)
- ರಂಗಶಿಕ್ಷಣ ಕೇಂದ್ರದ ಅನುಭವ ಪ್ರಮಾಣಪತ್ರ (ತರಬೇತಿ ಹೊಂದಿದ್ದರೆ)
- ರಂಗಭೂಮಿ ಅನುಭವ ಕುರಿತ ಸ್ವವಿವರ ಪತ್ರ
- ಆಧಾರ್ ಕಾರ್ಡ್ ಸಲ್ಲಿಸಬೇಕೆಂದು
ವೃತ್ತಿ ರಂಗಭೂಮಿ ರಂಗಾಯಣ ದಾವಣಗೆರೆ ನಿರ್ದೇಶಕರಾದ ಮಲ್ಲಿಕಾರ್ಜುನ ಕಡಕೋಳ ರವರು ಹಾಗೂ ವೃತ್ತಿ ರಂಗಭೂಮಿ ರಂಗಾಯಣ ದಾವಣಗೆರೆ.ವಿಶೇಷಾಧಿಕಾರಿಗಳಾದ ರವಿಚಂದ್ರ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.,