ದಾವಣಗೆರೆ, ಮೇ 23 – ಅಂತರ ರಾಷ್ಟ್ರೀಯ ಅಧ್ಯಾತ್ಮಿಕ ಸೇವಾ ಕೇಂದ್ರ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ದಾವಣಗೆರೆ ಶಾಖೆಯ 50ನೇ ವರ್ಷಾಚರಣೆಯ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಇದೇ ದಿನಾಂಕ 25ರ ಭಾನುವಾರ ಹಮ್ಮಿಕೊಳ್ಳಲಾಗಿದೆ ಎಂದು ಶಾಖೆಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ತಿಳಿಸಿದ್ದಾರೆ.
ನಗರದ ಶ್ರೀ ಡಿ. ದೇವರಾಜ ಅರಸು ಬಡಾವಣೆ `ಬಿ’ ಬ್ಲಾಕ್ನಲ್ಲಿರುವ ಬ್ರಹ್ಮಾಕುಮಾರೀಸ್ ಸಂಸ್ಥೆಯ ಶಿವಧ್ಯಾನ ಮಂದಿರದಲ್ಲಿ ಅಂದು ಬೆಳಿಗ್ಗೆ 10 ಗಂಟೆಗೆ ಈ ಸಮಾರಂಭ ಏರ್ಪಾಡಾಗಿದೆ ಎಂದು ಜಿಲ್ಲಾ ವರದಿಗಾರರ ಕೂಟದ ಕಚೇರಿಯಲ್ಲಿ ಇಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.
ಬ್ರಹ್ಮಾಕುಮಾರೀಸ್ ಸಂಸ್ಥೆಯು ಪ್ರಪಂಚದ 142 ದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಈ ಸಂಸ್ಥೆಯ ಪ್ರಧಾನ ಕೇಂದ್ರದ ಸಹ ಮುಖ್ಯ ಆಡಳಿತಾಧಿಕಾರಿಣಿ ಪೂಜ್ಯ ರಾಜಯೋಗಿನಿ ಬ್ರಹ್ಮಾಕುಮಾರಿ ಸುದೇಶ್ ದೀದೀಜಿ ಸುವರ್ಣ ಮಹೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.
ರಷ್ಯಾ ದೇಶದ ಬ್ರಹ್ಮಾಕುಮಾರೀಸ್ ಕೇಂದ್ರದ ಪ್ರಧಾನ ನಿರ್ದೇಶಕರಾದ ಪೂಜ್ಯ ರಾಜಯೋಗಿನಿ ಬ್ರಹ್ಮಾಕುಮಾರಿ ಚಕ್ರಧಾರಿ ದೀದೀಜಿ ಸಮಾರಂಭದ ಘನ ಸಾನ್ನಿಧ್ಯ ಮತ್ತು ಬ್ರಹ್ಮಾಕುಮಾರೀಸ್ ಸಂಸ್ಥೆಯ ಹುಬ್ಬಳ್ಳಿ ವಲಯ ನಿರ್ದೇಶಕರಾದ ರಾಜಯೋಗಿ ಬ್ರಹ್ಮಾಕುಮಾರ ಡಾ. ಬಸವರಾಜ ರಾಜಋಷಿ ಅಧ್ಯಕ್ಷತೆ ವಹಿಸುವರು.
ಹಿರಿಯ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ ಅವರು ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡುವರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಲೋಕಸಭೆ ಮಾಜಿ ಸದಸ್ಯ ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರುಗಳೂ ಸೇರಿದಂತೆ, ಜಿಲ್ಲೆಯ ಅನೇಕ ಗಣ್ಯರು ಉಪಸ್ಥಿತರಿರುವರು.
ಗೌರವಾರ್ಪಣೆ :
ಇದೇ ಸಂದರ್ಭದಲ್ಲಿ ಅಧ್ಯಾತ್ಮಿಕ ಕ್ಷೇತ್ರದಲ್ಲಿ ಸುದೀರ್ಘ 50 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬ್ರಹ್ಮಾಕುಮಾರೀಸ್ ಸಂಸ್ಥೆಯ 6 ಜನ ಶಿವಶಕ್ತಿಯರನ್ನು ವಿವಿಧ ಸಂಘ – ಸಂಸ್ಥೆಗಳು ಮತ್ತು ನಾಗರಿಕರಿಂದ `ಅಧ್ಯಾತ್ಮಿಕ ಕ್ಷೇತ್ರದ ಧೃವತಾರೆ’ ಬಿರುದು ನೀಡಿ, ಸನ್ಮಾನಿಸಿ, ಗೌರವಿಸಲಾಗುತ್ತದೆ.
ಬ್ರಹ್ಮಾಕುಮಾರೀಸ್ ಸಂಸ್ಥೆಯ ಹುಬ್ಬಳ್ಳಿ ವಲಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ನಿರ್ಮಲಾಜಿ, ದಾವಣಗೆರೆ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ, ಆಂಧ್ರಪ್ರದೇಶದ ಗುಂತಕಲ್ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಶಕುಂತಲಾಜಿ, ಶಿವಮೊಗ್ಗ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಅನುಸೂಯಾಜಿ, ತುಮಕೂರು ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಶೋಭಾಜಿ ಮತ್ತು ಮಹಾರಾಷ್ಟ್ರದ ಶೇವಗಾಂವ್ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಪುಷ್ಪಾಜಿ ಅವರುಗಳು ಗೌರವಾರ್ಪಣೆಗೆ ಪಾತ್ರರಾಗಿದ್ದಾರೆ.
ವಿಶ್ವ ಪರಿವರ್ತನೆಯಲ್ಲಿ ಬ್ರಹ್ಮಾಕುಮಾರೀಸ್ :
ವೈಯಕ್ತಿಕ ಜೀವನದಲ್ಲಿ ಬದಲಾವಣೆ ತರಲು ವ್ಯಕ್ತಿಗಳನ್ನು ಉತ್ತೇಜಿಸುವುದರ ಮೂಲಕ ವಿಶ್ವ ಪರಿವರ್ತನೆ ಮಾಡುವಲ್ಲಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಅಧ್ಯಾತ್ಮಿಕ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಸೇವೆ ಸಲ್ಲಿಸುತ್ತಿದೆ.
ಬ್ರಹ್ಮಾಕುಮಾರೀಸ್ ಸಂಸ್ಥೆಯು ವಿಶ್ವ ಸಂಸ್ಥೆಯಲ್ಲಿ ಸರ್ಕಾರೇತರ ಸಂಸ್ಥೆಯಾಗಿ ಅಂಗೀಕರಿಸಲ್ಪಟ್ಟಿದ್ದು, ಯುನಿಸೆಫ್ ಮತ್ತು ಎಕೋಸಾಕ್ಗಳಲ್ಲಿ ಸಾಮಾನ್ಯ ಸಲಹೆಗಾರನಾಗಿ ಮಾನ್ಯತೆ ಪಡೆದಿದೆ. ವಿಶ್ವಸಂಸ್ಥೆಯ ಧ್ಯೇಯ ಮತ್ತು ಉದ್ದೇಶಗಳಿಗೆ ಒತ್ತಾಸೆ ನೀಡುತ್ತಾ, ಅಧ್ಯಾತ್ಮಿಕ ಮನೋಭಾವ, ಕಾರ್ಯದೃಷ್ಟಿಗಳನ್ನೊಳಗೊಂಡು, ಹವಾಮಾನ ಬದಲಾವಣೆ, ಆಹಾರ ಬಿಕ್ಕಟ್ಟು, ಲಿಂಗ ಸಮಾನತೆ, ಸಾಮಾಜಿಕ ಆರೋಗ್ಯ, ಮಾನವೀಯ ಹಕ್ಕುಗಳು ಮುಂತಾದ ಕ್ಷೇತ್ರಗಳಲ್ಲಿ ಸಂಸ್ಥೆಯು ಸೇವೆ ಸಲ್ಲಿಸುತ್ತಿದೆ.
ದಾವಣಗೆರೆಯಲ್ಲಿ ಬ್ರಹ್ಮಾಕುಮಾರಿ ಸಂಸ್ಥೆ :
ದಾವಣಗೆರೆಯಲ್ಲಿ 1975 ರಲ್ಲಿ ಸ್ಥಾಪನೆಗೊಂಡ ಬ್ರಹ್ಮಾಕುಮಾರೀಸ್ ಸಂಸ್ಥೆಯು ಇದೀಗ 50ನೇ ವರ್ಷದ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಈ ಶಾಖೆಯಡಿಯಲ್ಲಿ ದಾವಣಗೆರೆ ಸುತ್ತಮುತ್ತ 10 ಉಪ ಸೇವಾ ಕೇಂದ್ರಗಳು ಮತ್ತು 75ಕ್ಕೂ ಹೆಚ್ಚು ಗೀತ ಪಾಠಶಾಲೆಗಳಲ್ಲಿ ಅಧ್ಯಾತ್ಮಿಕ ಹಾಗೂ ರಾಜಯೋಗದ ಶಿಕ್ಷಣವನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡುತ್ತಿದೆ.
ಈ ಶಾಖೆಯ ಪ್ರಧಾನ ಸಂಚಾಲಕರಾಗಿರುವ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ನೇತೃತ್ವದಲ್ಲಿ ನಿರ್ಮಾಣಗೊಂಡಿರುವ ಅಧ್ಯಾತ್ಮಿಕ ಚಿತ್ರ ಸಂಗ್ರಹಾಲವನ್ನೊಳಗೊಂಡಿರುವ ಆಕರ್ಷಕವಾದ ಬೃಹತ್ ಶಿವಲಿಂಗ ಕಟ್ಟಡವು ಅಧ್ಯಾತ್ಮಿಕ ತಾಣವಾಗಿದೆ.