ದಾವಣಗೆರೆ:
ಕರ್ನಾಟಕ ಪತ್ರಿಕೋದ್ಯಮದ ಇತಿಹಾಸದಲ್ಲಿ ಹೊಸ ಪ್ರಯೋಗಗಳ ಮೂಲಕವೇ ಹೆಸರಾಗಿರುವ ವಿಶ್ವವಾಣಿಯ ವಿನೂತನ ಪ್ರಯೋಗವೆನಿಸಿರುವ “ಗ್ಲೋಬಲ್ ಅಚೀವರ್ಸ್ ಅವಾರ್ಡ್ – ೨೦೨೬” ರ ಪ್ರಶಸ್ತಿಗೆ ನಾಡಿನ ಹಿರಿಯ ಕನ್ನಡ ಪರಿಚಾರಕ, ಕನ್ನಡಪರ ಚಿಂತಕ, ನಿವೃತ್ತ ಮುಖ್ಯ ಶಿಕ್ಷಕ ಹಾಗೂ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ತೊಗಲೇರಿ ಆಯ್ಕೆಯಾಗಿದ್ದಾರೆ ಎಂದು ವಿಶ್ವವಾಣಿ ದಿನಪತ್ರಿಕೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಿದಾನಂದ ಕಡಲಾಸ್ಕರ ತಿಳಿಸಿದ್ದಾರೆ.
ವಿಶ್ವವಾಣಿ ದಿನಪತ್ರಿಕೆಯು ಕಳೆದ 11 ವರ್ಷಗಳಿಂದ ನಿರಂತರವಾಗಿ ಗ್ಲೋಬಲ್ ಅಚೀವರ್ಸ್ ಅವಾರ್ಡ್ನ್ನು ಕೊಡುತ್ತಿದೆ. ಕನ್ನಡ ನಾಡು ನುಡಿಗಾಗಿ ನಿರಂತರವಾಗಿ ಶ್ರಮಿಸಿದ ಕರ್ನಾಟಕ ರಾಜ್ಯದ ಸಾಧಕರನ್ನು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅವರ ಸಾಧನೆಯನ್ನು ಜನ ಗುರುತಿಸುವಂತೆ ಮಾಡುವುದು ಈ ಪ್ರಶಸ್ತಿಯ ಪ್ರಮುಖ ಉದ್ದೇಶವಾಗಿದೆ. ಈ ಪ್ರಶಸ್ತಿಯ ಇನ್ನೊಂದು ವಿಶೇಷವೆಂದರೆ ಪ್ರತೀ ಬಾರಿಯೂ ವಿವಿಧ ದೇಶಗಳಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತದೆ. ಈವರೆಗೆ ಕಾಂಬೋಡಿಯಾ, ವಿಯಟ್ನಾಂ, ಇಂಡೋನೇಷ್ಯಾ, ಮಾರಿಷಸ್, ಮಾಲ್ಡೀವ್ಸ್, ಜಪಾನ್, ಓಮಾನ್, ರಷ್ಯಾ, ಭೂತಾನ್, ಪ್ರಾನ್ಸ್ ಹಾಗೂ ಸ್ವಿಜರ್ಲ್ಯಾಂಡ್ ದೇಶಗಳಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದೆ. ಈ ಬಾರಿಯ ಪ್ರಶಸ್ತಿಯನ್ನು ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ ಸಮೀಪದ ಸನ್ ಸಿಟಿಯಲ್ಲಿ ದಿನಾಂಕ 24.02.2026 ರಂದು ನಡೆಯಲಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಕ್ಷಿಣ ಆಫ್ರಿಕಾ ದೇಶದ ರಾಯಭಾರಿಗಳು, ಜನಪ್ರತಿನಿಧಿಗಳು, ಕೈಗಾರಿಕೋದ್ಯಮಿಗಳು ಸೇರಿದಂತೆ ಗಣ್ಯಾತಿಗಣ್ಯರು ಭಾಗವಹಿಸುವರು. ಸಮಾರಂಭದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳ ಕಲಾವಿದರಿಂದ ಕಲಾ ಪ್ರದರ್ಶನವೂ ಇರುತ್ತದೆ.
ವಿಶ್ವೇಶ್ವರ ಭಟ್ ಸಾರಥ್ಯದ ವಿಶ್ವವಾಣಿ ದಿನಪತ್ರಿಕೆ ಬಳಗದಿಂದ “ಗ್ಲೋಬಲ್ ಅಚೀವರ್ಸ್ ಅವಾರ್ಡ್ -೨೦೨೬” ಪ್ರಶಸ್ತಿಗೆ ಭಾಜನರಾಗಿರುವ ಬಿ.ವಾಮದೇವಪ್ಪ ತೊಗಲೇರಿ ಅವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಕೆ.ರಾಘವೇಂದ್ರ ನಾಯರಿ, ಸಿ.ಜಿ.ಜಗದೀಶ್ ಕೂಲಂಬಿ, ಬಿ.ದಿಳ್ಯಪ್ಪ, ರೇವಣಸಿದ್ದಪ್ಪ ಅಂಗಡಿ, ಇ.ಎಂ.ಮಂಜುನಾಥ್ ಏಕಬೋಟೆ, ಜಿಗಳಿ ಪ್ರಕಾಶ್, ಕೆ.ಎಸ್.ವೀರೇಶ ಪ್ರಸಾದ್ ಸೇರಿದಂತೆ ಸಾಹಿತಿಗಳು, ವಿದ್ವಾಂಸರು, ಕಸಾಪ ಆಜೀವ ಸದಸ್ಯರು ವಾಮದೇವಪ್ಪ ಅವರನ್ನು ಅಭಿನಂದಿಸಿದ್ದಾರೆ.(
ಕೆ.ರಾಘವೇಂದ್ರ ನಾಯರಿ)

