ದಾವಣಗೆರೆ – 3 ತಿಂಗಳ ವೇತನ ಬಿಡುಗಡೆಗೊಳಿಸುವಂತೆ ದಾವಣಗೆರೆ ತಾಲ್ಲೂಕು ಬಿಸಿಯೂಟ ತಯಾರಕರು ದಾವಣಗೆರೆ ಉಪ ವಿಭಾಗಾಧಿಕಾರಿ ಕಛೇರಿ ಬಳಿ ಆಕ್ರೋಶ ವ್ಯಕ್ತಪಡಿಸಿದರು.
ಎಐಟಿಯುಸಿ ಸಂಯೋಜಿತ ಬಿಸಿಊಟ ತಯಾರಕರ ಫೆಡರೇಶನ್ ದಾವಣಗೆರೆ ತಾಲ್ಲೂಕು ಸಮಿತಿ ನೇತೃತ್ವದಲ್ಲಿಂದು ದಾವಣಗೆರೆ ಉಪವಿಭಾಗಾಧಿ ಕಚೇರಿ ಬಳಿ ಜಮಾಗೊಂಡು ತಮಗೆ ಮೂರು ತಿಂಗಳಿನಿಂದ ಬಾಕಿ ಇರುವ ವೇತನವನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಉಪ ವಿಭಾಗಾಧಿಕಾರಿ ಅವರಿಗೆ ಮನವಿ ಸಲ್ಲಿಸುವ ಮೂಲಕ ರಾಜ್ಯದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ ಅವರಿಗೆ ಆಗ್ರಹಿಸಿದರು.
ಬಿಸಿಊಟ ತಯಾರಕರ ಫೆಡರೇಶನ್ ರಾಜ್ಯಾಧ್ಯಕ್ಷ ಆವರಗೆರೆ ಚಂದ್ರು ಮಾತನಾಡಿ ಬಿಸಿಊಟತಯಾರಕರಿಗೆ ವೇತನ ನೀಡಲು ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಅನುದಾನದ ಹಣ ಜಮಾಗೊಂಡಿದ್ದು ಇವರಿಗೆ ವೇತನ ನೀಡಲು ಹಣದ ಕೊರತೆ ಇರುವುದಿಲ್ಲ ಕಾರಣ ಮಧ್ಯಾಹ್ನ ಉಪಹಾರ ,ಯೋಜನೆ ರಾಜ್ಯ ಕಚೇರಿ ಅಧಿಕಾರಿಗಳು ಸರಿಯಾಗಿ ತಮ್ಮ ಕೆಲಸ ನಿರ್ವಹಿಸದೆ ನಿರ್ಲಕ್ಷ ತೋರಿರುವುದೇ ಇದಕ್ಕೆಲ್ಲ ಕಾರಣ ಎಂದು, ಮತ್ತು ಶಿಕ್ಷಣ ಮಂತ್ರಿಗಳಿಗೆ ಅಧಿಕಾರಿಗಳ ಮೇಲೆ ಹಿಡಿತ ಇಲ್ಲದಿರುವುದೇ ಕಾರಣ ಎಂದು ಆಕ್ರೋಶ ಭರಿತರಾಗಿ ಮಾತನಾಡಿದರು.
ಬಿಸಿಊಟ ತಯಾರಕರ ಸಮಸ್ಯೆಗಳು ಅನೇಕ ಇದ್ದು ಅವುಗಳ ಬಗ್ಗೆ ಚರ್ಚಿಸಲು ಸಭೆಯೊಂದನ್ನು ಕರೆಯಿರಿ ಎಂದು ಹಲವು ಬಾರಿ ಶಿಕ್ಷಣ ಮಂತ್ರಿಗಳಿಗೆ ಖುದ್ದು ಮನವಿ ಸಲ್ಲಿಸಿ ಹೇಳಿದ್ದರೂ ಕೂಡಾ ಶಿಕ್ಷಣ ಮಂತ್ರಿಗಳು ನಿರ್ಲಕ್ಷೆ ಮಾಡಿದ್ದು, ಈ ದಿನ ನಮ್ಮ ಯಾವುದೇ ಬೇಡಿಕೆಯನ್ನು ಕೇಳದೆ ಮೂರು ತಿಂಗಳಿನಿಂದ ಬಾಕಿ ಇರುವ ವೇತನವನ್ನು ಕೂಡಲೇ ಬಿಡುಗಡೆ ಮಾಡಿ ಎಂದು ರಾಜ್ಯಾದ್ಯಂತ ಹೋರಾಟಕ್ಕೆ ಕರೆ ಕೊಟ್ಟಿರುವ ಭಾಗವಾಗಿ ಇಂದು ದಾವಣಗೆರೆ ತಾಲೂಕಿನಲ್ಲಿ ಹೋರಾಟ ಮಾಡಲಾಗಿದೆ ಎಂದರು. ಕೂಡಲೆ ಬಿಸಿಊಟ ತಯಾರಕರಿಗೆ ಬಾಕಿ ವೇತನ ಬಿಡುಗಡೆ ಮಾಡದೇ ಹೋದರೆ ಮುಂದಿನ ದಿನಗಳಲ್ಲಿ ಕಚೇರಿಯ ಒಳಗೆ ಕುಳಿತು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಸಂಘಟನೆಯ ಜಿಲ್ಲಾಧ್ಯಕ್ಷೆ ಮಳಲ್ಕೆರೆ ಜಯಮ್ಮ, ದಾವಣಗೆರೆ ಉತ್ತರ ವಲಯದ ಅಧ್ಯಕ್ಷೆ ನಾಗರತ್ನಮ್ಮ, ದಾವಣಗೆರೆ ದಕ್ಷಿಣ ವಲಯದ ಅಧ್ಯಕ್ಷೆ ಪದ್ಮಾ ಮಾತನಾಡಿ ಸರ್ಕಾರವನ್ನು ಒತ್ತಾಯಿಸಿದರು.
ಸಂಘಟನೆಯ ಮುಖಂಡರುಗಳಾದ ರಮೇಶ್ ಸಿ ದಾಸರ, ಜಿ ಎಲ್ಲಪ್ಪ, ನರೇಗಾ ರಂಗನಾಥ್, ಎ ತಿಪ್ಪೇಶ್, ಸರೋಜಾ, ಕರೂರು ಮಂಜುಳಾ ಮುಂತಾದವರು ಮಾತನಾಡಿದರು.
3 ತಿಂಗಳ ವೇತನ ಬಿಡುಗಡೆಗೊಳಿಸುವಂತೆ ಬಿಸಿಊಟ ತಯಾರಕರಿಂದ ಆಕ್ರೋಶ.
RELATED ARTICLES

